Monday, January 2, 2012
ಸಂತೆ ಕರಗಿದ ಮೇಲೆ ಸಂತನ ಆಗಮನ
ವರ್ಷದ ಕೊನೆಯ ದಿನ ಏನು ಮಾಡಿದಿರಿ?
ಭರ್ಜರಿ ಪಾರ್ಟಿ ಮಾಡಿದ್ದಾದರೆ, ಅದನ್ನು ಪಕ್ಕಕ್ಕಿಡಿ. ಎಸ್ಸೆಮ್ಮೆಸ್ಗಳನ್ನು ಕಳಿಸಿದ್ದು, ಫೋನ್ ಮಾಡಿ ಶುಭಾಶಯ ಕೋರಿದ್ದು, ಕೇಕ್ ಕತ್ತರಿಸಿದ್ದು, ಮೇಲ್ ಹಾಕಿದ್ದು, ಹೂಗುಚ್ಛಗಳನ್ನು ಕೊಟ್ಟಿದ್ದು, ದೇವಸ್ಥಾನದಲ್ಲಿ ಪೂಜೆ ಮಾಡಿಸಿದ್ದು- ಎಲ್ಲವನ್ನೂ ಆ ಕಡೆ ಸರಿಸಿ.
ನಾನು ಕೇಳುತ್ತಿರುವುದು- ನೀವು ಒಬ್ಬರೇ ಕೂತು ಏನು ಮಾಡಿದಿರಿ ಅಂತ.
ಒಂದು ವರ್ಷ ಕಳೆದು ಮತ್ತೊಂದು ವರ್ಷ ಹೊಸ್ತಿಲಲ್ಲಿರುವಾಗ, ಏನು ಮಾಡಿದಿರಿ ಎಂಬುದನ್ನು ಒಮ್ಮೆ ಯೋಚಿಸಿ. ಹೊಸ ವರ್ಷ ತಂತಾನೆ ಬಂದಿತು. ಅದಕ್ಯಾಕೆ ಅಷ್ಟೊಂದು ಸಂಭ್ರಮಪಟ್ಟಿರಿ? ನೀವು ಸಡಗರ ಪಡದಿದ್ದರೂ ಅದು ಬಂದೇ ಬರುತ್ತಿತ್ತು. ನೀವು ಅಬ್ಬರದ ಪಾರ್ಟಿ ಮಾಡಿರದಿದ್ದರೂ ಹೊಸ ವರ್ಷದ ಆಗಮನಕ್ಕೆ ಯಾವುದೇ ಅಡೆತಡೆಗಳು ಇರುತ್ತಿದ್ದಿಲ್ಲ. ನಾವು ಏನೇ ಮಾಡಿದರೂ, ಮಾಡದಿದ್ದರೂ ಗಡಿಯಾರದ ಮುಳ್ಳು, ಡಿಜಿಟಲ್ ಅಂಕೆಗಳು ಹಾಗೂ ಕ್ಯಾಲೆಂಡರ್ ಬದಲಾಗುತ್ತಲೇ ಹೋಗುತ್ತವೆ.
ನಮಗೆ ನಾವು ಏನು ಮಾಡಿಕೊಂಡೆವು? ಏನನ್ನು ಅಂದುಕೊಂಡೆವು. ಒಂದು ವರ್ಷದ ಹಿಂದೆಯೂ ಇದೇ ರೀತಿ ಏನೇನೋ ಅಂದುಕೊಂಡಿದ್ದೆವು. ಅವುಗಳ ಪೈಕಿ ಎಷ್ಟನ್ನು ಮಾಡಿದೆವು? ಎಷ್ಟೊಂದು ಹಾಗೇ ಉಳಿಯಿತು? ನಾವು ಮಾಡಿದ, ಮಾಡದೇ ಉಳಿದ ಲೆಕ್ಕಾಚಾರ ಏನಾದರೂ ಇದೆಯಾ?
ಹೊಸ ವರ್ಷದ ಭೀಷ್ಮ ಪ್ರತಿಜ್ಞೆಗಳನ್ನು ನಾನಿಲ್ಲಿ ಪ್ರಸ್ತಾಪಿಸುತ್ತಿಲ್ಲ. ಅಂಥ ಪ್ರತಿಜ್ಞೆಗಳನ್ನು ಈಡೇರಿಸುವುದು ಅಷ್ಟು ಸುಲಭವೂ ಅಲ್ಲ. ಆದರೆ, ಒಂದೆರಡು ವಿಷಯಗಳನ್ನಾದರೂ ನಾನು ಮಾಡಬೇಕಿತ್ತು ಅಥವಾ ಮಾಡಬಾರದಿತ್ತು ಅಂತ ನಾವೆಲ್ಲ ಅಂದುಕೊಳ್ಳುತ್ತೇವಲ್ಲ? ಆ ವಿಷಯಗಳ ಬಗ್ಗೆ ಯೋಚಿಸಿದಿರಾ?
ಪ್ರತಿ ವರ್ಷ ಇಂಥ ಒಂದೆರಡಾದರೂ ಅನಿಸಿಕೆಗಳು ನಮ್ಮಲ್ಲಿ ಮೂಡಿರುತ್ತವೆ. ಕಳೆದ ವರ್ಷಕ್ಕಿಂತ ಈ ವರ್ಷ ಭಿನ್ನವಾಗಿರುವಂತೆ ಬದುಕಬೇಕು. ಈ ವರ್ಷ ಹೊಸದೇನನ್ನಾದರೂ ಕಲಿಯಬೇಕು, ಕಾಡುವ ಹಳೆಯ ಚಟವನ್ನು ಬಿಡಬೇಕು. ನೆನಪನ್ನು ಕಳಚಿಕೊಳ್ಳಬೇಕು. ಹಿಂದಿಗಿಂತ ನಾನು ಈ ವರ್ಷ ಉತ್ತಮ ವ್ಯಕ್ತಿಯಾಗಬೇಕು ಎಂದು ಅಂದುಕೊಂಡಿರುತ್ತೇವೆ.
ಅಂಥ ಅನಿಸಿಕೆಗಳ ಕುರಿತು ಒಂದು ಸಲವಾದರೂ ಯೋಚಿಸಿದಿರಾ?
ನಮ್ಮ ನಿಯಂತ್ರಣದಲ್ಲಿಲ್ಲದ ಕಾಲದ ಬಗ್ಗೆ, ಕ್ಯಾಲೆಂಡರ್ ಬಗ್ಗೆ ಯೋಚಿಸುವುದು ಬೇಡ. ಆದರೆ, ನಮ್ಮ ಮಿತಿಯೊಳಗೇ ಎಷ್ಟೊಂದು ಸಾಧ್ಯತೆಗಳಿವೆ. ದಿನಾ ವ್ಯಾಯಾಮ, ಚಟದ ಪ್ರಮಾಣ ಸ್ವಲ್ಪ ಕಡಿಮೆ ಮಾಡುವುದು, ವಿಫಲ ಪ್ರೇಮಕ್ಕೆ ಎಳ್ಳುನೀರು ಬಿಟ್ಟು ಮತ್ತೆ ಜೀವಂತಿಕೆ ಗಳಿಸುವುದು, ಚೆನ್ನಾಗಿ ಓದುವುದು, ಬರೆಯುವುದು, ಹಣ ಗಳಿಸುವುದು, ಉದ್ಯಮ ಬೆಳೆಸುವುದು, ಒಂದು ಒಳ್ಳೆಯ ಗೆಳೆತನ- ಹೀಗೆ ಎಷ್ಟೊಂದು ವಿಷಯಗಳಿರುತ್ತವೆ. ಇವನ್ನು ಮಾಡಬೇಕೆಂದು ವರ್ಷಪೂರ್ತಿ ಅಂದುಕೊಂಡಿರುತ್ತೇವೆ ಕೂಡಾ.
ಇಂಥ ವಿಷಯಗಳನ್ನು ಯೋಚಿಸಿದಿರಾ?
ಪರವಾಗಿಲ್ಲ. ನಿಮ್ಮ ಹೊಸ ವರ್ಷದ ಪಾರ್ಟಿ ಎಷ್ಟೇ ಜೋರಾಗಿರಲಿ, ಅದು ಒಂದು ದಿನದ ಸಂಭ್ರಮ ಮಾತ್ರ. ಸರಿಯಾಗಿ ನೋಡಿದರೆ, ಅರ್ಧ ರಾತ್ರಿಯ ಸಂಭ್ರಮ ಮಾತ್ರ. ಗಡಿಯಾರ ೧೨ಕ್ಕೆ ಬರುತ್ತಲೇ ಹಾಕಿದ ಕೇಕೆ, ಪಟ್ಟ ಸಡಗರ, ಉಕ್ಕಿದ ಮದ್ಯ, ಬಿಕ್ಕಿದ ನೆನಪು- ಎಲ್ಲವೂ ಮತ್ತೆ ಗಡಿಯಾರ ಮರುದಿನ ೧೨ಕ್ಕೆ ಬರುವ ಹೊತ್ತಿಗೆ ಮರೆಯಾಗಿರುತ್ತವೆ. ಹೊಸ ವರ್ಷವೊಂದು ಅದ್ಯಾವ ಸಡಗರವೂ ಇಲ್ಲದೇ ನಮ್ಮೆದುರು ಬಂದು ನಿಂತಿರುತ್ತದೆ.
ಪರವಾಗಿಲ್ಲ. ಈಗಲೂ ಕಾಲ ಮಿಂಚಿಲ್ಲ. ಇವತ್ತು ವರ್ಷದ ಮೊದಲ ದಿನ. ನಿನ್ನೆಯವರೆಗೆ ಏನೇನಾಗಿತ್ತೋ ಅದನ್ನೆಲ್ಲ ಪಕ್ಕಕ್ಕಿಡಿ. ಸ್ವಸ್ಥ ಮನಸ್ಸಿನಿಂದ ಕೂತುಕೊಳ್ಳಿ. ಮಾಡಬೇಕೆಂದು ಅಂದುಕೊಂಡ ವಿಷಯಗಳನ್ನು ಮನಸ್ಸಿನ ಮುಂದೆ ತಂದುಕೊಳ್ಳಿ. ಈ ವರ್ಷದ ೩೬೫ ದಿನಗಳು ನಿಮ್ಮ ಮುಂದಿವೆ. ಪೂರ್ತಿ ೧೨ ತಿಂಗಳುಗಳು ನಿಮ್ಮ ಪಾಲಿಗಿವೆ. ಈ ೫೨ ವಾರಗಳಲ್ಲಿ ನೀವು ಏನೆಲ್ಲ ಮಾಡಬಹುದು ಎಂಬುದನ್ನು ಒಮ್ಮೆ ಯೋಚಿಸಿ.
ಏನೂ ಇಲ್ಲದೆ ಬೆತ್ತಲೆಯಾಗಿ ಜಗತ್ತಿಗೆ ಬಂದವರು ನೀವು. ಕಣ್ತೆರೆಯಲೂ ಆಗದ ಸ್ಥಿತಿಯಲ್ಲಿದ್ದ ನೀವು ಈಗ ಇದನ್ನೆಲ್ಲ ಓದಿ ಅರ್ಥ ಮಾಡಿಕೊಳ್ಳುವಷ್ಟು ದೊಡ್ಡವರಾಗಿದ್ದೀರಿ. ಜಗತ್ತಿನ ಎಷ್ಟೋ ಜನರ ಪಾಲಿಗೆ ಇಲ್ಲದ, ಇದ್ದರೂ ಸರಿಯಾಗಿರದ ಅಂಗಾಂಗಗಳು, ಅವಕಾಶಗಳು, ಅನುಕೂಲಗಳು ನಿಮಗಿವೆ. ಇವನ್ನೆಲ್ಲ ಬಳಸಿಕೊಂಡು, ನಿಮ್ಮೆದುರು ಸಮೃದ್ಧವಾಗಿರುವ ೩೬೫ ದಿನಗಳಲ್ಲಿ ಏನೇನೆಲ್ಲ ಮಾಡಬಹುದು ಎಂಬುದನ್ನು ಯೋಚಿಸಿ.
ನೀವು ಇನ್ನಷ್ಟು ಉತ್ತಮವಾಗಬಹುದು, ಮತ್ತಷ್ಟು ಬುದ್ಧಿವಂತರೋ, ಶ್ರೀಮಂತರೋ ಆಗಬಹುದು. ಅದನ್ನು ನಿಮಗೆ ನೀವೇ ಮಾಡಿಕೊಳ್ಳದೇ ಇನ್ಯಾರೂ ನಿಮಗಾಗಿ ಮಾಡಲಾರರು. ಕರೆದರೆ ಗೆಳೆಯರು ಬರಬಹುದು, ಹಣ ಖರ್ಚು ಮಾಡಿದರೆ ಸೌಕರ್ಯಗಳು ಬರಬಹುದು. ಆದರೆ, ಕೆಲವನ್ನು ನೀವೇ ಮಾಡಿಕೊಳ್ಳಬೇಕು. ನಿಮ್ಮ ಹೊಟ್ಟೆಗೆ ನೀವೇ ಊಟ ಮಾಡಬೇಕಾಗಿರುವಂತೆ, ನಿಮ್ಮ ಉನ್ನತಿಯನ್ನು ನೀವೇ ಮಾಡಿಕೊಳ್ಳಬೇಕು. ನಿಮ್ಮ ಬುದ್ಧಿವಂತಿಕೆಯನ್ನು, ದೈಹಿಕ ಶಕ್ತಿಯನ್ನು, ಮಾನಸಿಕ ಎತ್ತರವನ್ನು ನೀವೇ ಗಳಿಸಿಕೊಳ್ಳಬೇಕು.
ಹೊಸ ವರ್ಷ ಅಂಥದೊಂದು ಬಲವಾದ ಅನಿಸಿಕೆಯನ್ನು, ಪ್ರೇರಣೆಯನ್ನು ನಿಮ್ಮಲ್ಲಿ ಮೂಡಿಸಲಿ. ಬರಲಿರುವ ೩೬೫ ದಿನಗಳಲ್ಲಿ ನೀವು ಅಂಥದೊಂದು ಗಟ್ಟಿ ವ್ಯಕ್ತಿತ್ವವನ್ನು ನೀವು ಹೊಂದುವಂತಾಗಲಿ. ಇನ್ನಷ್ಟು ಬೆಳೆಯಿರಿ, ಜೊತೆಗಿರುವವರನ್ನೂ ಬೆಳೆಸಿರಿ. ರೆಂಬೆ-ಕೊಂಬೆಗಳು ಸಮೃದ್ಧಿಯಾದಷ್ಟೂ ಮರ ಬಲಶಾಲಿಯಾಗುವಂತೆ, ನಿಮ್ಮ ಹವ್ಯಾಸಗಳು ಮತ್ತು ಪ್ರಯತ್ನಗಳು ನಿಮ್ಮನ್ನು ಸಮೃದ್ಧ ವ್ಯಕ್ತಿಯನ್ನಾಗಿಸಲಿ.
ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.
- ಚಾಮರಾಜ ಸವಡಿ
Subscribe to:
Post Comments (Atom)
0 comments:
Post a Comment